ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ಆಗಸ್ಟ್ 16, 2011

ಸೈನಿಕ

ದೇಶ ಸೇವೆಗೆ ಭಾರತ ಮಾತೆಗೆ


ರಕ್ಷಣೆ ನೀಡಲು ಹೊರಟ ಯೋಧ

ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ

ಎದೆಗುಂಡಿಗೆ ನೀಡಲು ಸಿದ್ಧನಾದ

ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ

ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ

ಶತ್ರುಗಳ ಸರ್ವನಾಶವೇ ನನ್ನ ಗುರಿ

ಅದು ದೇಶ ರಕ್ಷಣೆಗೆ ಒಂದು ಗರಿ

ಚಿಂತಿಸದೆ ಮುನ್ನಡೆದ ಧೀರ

ದೇಶ ಸೇವೆಯೇ ಈಶ ಸೇವೆಯೆಂದ ವೀರ

ಕವಿತೆ

ಪುಸ್ತಕಗಳು ಶೆಲ್ಪಿನಲಿ

ಮೌನವಾಗಿ ಕುಳಿತಿವೆ

ಕವಿಗಳ ಮನಸ್ಸು

ಪುಟದಲ್ಲಿ ಅರಳಿದೆ

ಭಾವಗಳ ಲಿಪಿಯು

ಅಕ್ಷರವಾಗಿ ಮೂಡಿದೆ
 
ಶಬ್ದಗಳ ಸಮ್ಮೇಳನ

ಕವನವಾಗಿ ಕಂಡಿದೆ



ಗುರುವಾರ, ಜುಲೈ 21, 2011

ನಾನು ಯಾರು ??

ನಾನು ನಕ್ಕರೆ
ಅಕ್ಕರೆ ಬರುವುದು
ನಾನು ಅತ್ತರೆ
ಕತ್ತಲೆ ಹರಡುವುದು
ನಾನು ಖುಷಿಯಾದರೆ
ಮಳೆ ಸುರಿಯುವುದು
ನಾನು ದು:ಖಿಸಿದರೆ
ಭೂಮಿ ಬರಡಾಗುವುದು
ನಾನು ಕೋಪಗೊಂಡರೆ
ಜ್ವಾಲಾಮುಖಿ ಏಳುವುದು
ನಾನು ಸುಮ್ಮನಿದ್ದರೆ
ಸುಂದರತೆ ಹೆಚ್ಚುವುದು
ನಾನು ಪ್ರೀತಿಸಿದರೆ
ಬೆಳದಿಂಗಳ ರಾತ್ರಿಯಾಗುವುದು
ನಾನು ದ್ವೇಷಿಸಿದರೆ
ಸಿಡಿಲು ಗುಡುಗು ಕೇಳುವುದು
ನಾನು ಮೌನಿಯಾದರೆ
ಪ್ರೇಮಿಗಳ ಮಿಲನವಾಗುವುದು
ನಾನು ಯಾರು! ನಾನು ಯಾರು!

ನಾನು  ನಿಸರ್ಗ


ನೊಂದ ಜೀವ

ಸಂಜೆಯ ಸೊಬಗಿನಲಿ
ಮನಸ್ಸಿತ್ತು ಮೌನದಲಿ
ಏಕಾಂಗಿ ಹೃದಯ
ಸೋತಿತ್ತು ದು:ಖದಲಿ

ಕೋಪದ ಗಳಿಗೆಯಲಿ
ಮುಳುಗಿತ್ತು ಚಿಂತೆಯಲಿ
ಅಶಾಂತ ಮನಸ್ಸು
ಒದ್ದೆಯಾಗಿತ್ತು ಕಣ್ಣೀರಿನಲಿ

ಕ್ಷಣ ಕ್ಷಣಗಳಲ್ಲಿ
ಜೊತೆಗಾರನ ನೆನಪಿನಲಿ
ಸುಂದರ ಮುಖವು
ಮುದುಡಿತ್ತು ಬೇಸರದಲಿ

ಅಶಾಂತ ಚಿತ್ತದಲಿ
ಕೊರಗಿತ್ತು ಜೀವನದಲಿ
ಮುದ್ದಾದ ಹೃದಯವ
ಕಿತ್ತೆಸೆಯಿತು ಪ್ರೀತಿಯಲಿ

ಮೊಬೈಲ ಹುಡುಗ




ಸ್ನೇಹ ಪ್ರೀತಿಯ ಈ ಹುಡುಗ
ಸಾದಾ ಸೀದಾ ಬಲು ಜೋರ
ಎಲ್ಲರ ಹೃದಯ ಕದಿಯುವ ಬೇಗ
ಸ್ಲಿಮ್ ಸಿಮ್ಮನ್ನು ಇರಿಸಿದ
ಇವನಿಗೆ ಒಬ್ಬಳು ಬೇಡಿಗ
ಎರಡು ಹುಡುಗಿಯರ ಪ್ರೀತಿಸಿದ
ಗೆಳೆತನ ಬಯಸಿ ಮನವ ಕದಿಯಲು
ಇಂಟರನೆಟನ್ನು ಅಳವಡಿಸಿದ
ಬೋರಾದಾಗ ಮಜ ಮಾಡಲು
ಲೌಡಸ್ಪೀಕರ ಹಾಡು ಹಚ್ಚಿದ
ಚೆಂದದ ಹುಡುಗಿ ಕಾಣಿಸಿದರೆ
ಕ್ಯಾಮೆರಾದಿಂದ ಕ್ಲಿಕ್ಕಿಸಿದ
ನೆನಪುಗಳನ್ನು ಎದೆಯಲಿ ಬರೆಯಲು
ಮೆಮರಿ ಕಾರ್ಡನ್ನು ಹಾಕಿಸಿದ
ಕಳ್ಳ ನಲ್ಲ ತುಂಟಾಟಕೆ
ಮೆಸ್ಸೆಜ ಕಳುಹಿಸಿ ಅವಳನ್ನು ಪ್ರೀತಿಸಿದ
ಮಧುರ ಧ್ವನಿಯ ಆಲಿಸಲು
ಫೋನನಲ್ಲಿ ಮಾತಾಡಿ ಆನಂದಿಸಿದ







ಎಲ್ಲಿರುವೆ ??




ಸುಮ್ಮನೆ ನಾನು ನಿಂತಿರುವಾಗ
ಗೆಳೆಯ ನೀನು ಬಳಿ ಬಂದೆ
ಸದ್ದು ಮಾಡದೆ ಮೆಲ್ಲ ಮೆಲ್ಲನೆ

ನನ್ನ ನೆರಳಲಿ ನಲಿದಾಡಿದೆ
ನಾನು ದೂರ ಓಡಿ ಹೋದರೆ

ನೀನೆಲ್ಲೊ ಮರೆಯಾದೆ
ಬಾರೊ ಬೇಗ ನನ್ನ ನಲ್ಲ
ಈ ಹೃದಯ ನಿನ್ನ ಪ್ರೀತಿಸಿದೆ



ಮಂಗಳವಾರ, ಜುಲೈ 19, 2011

ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ



ಮೊದಲ ಸಲ ನೋಡಿ ನಾಚಿದಾಗ

ನಿನಗೆ ನಾ ಇಷ್ಟವೆಂದು ತಿಳಿದಾಗ

ಕದ್ದ ಕನಸಿನಲ್ಲಿ ಮನಸ್ಸು ಕೊಟ್ಟಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ


ಮನ್ಯಾಗ ಹೇಳದ ಭೇಟಿ ಆದಾಗ


ಇದ್ದಂತ ಅರಿವ್ಯಾಗ ನೀ ನನ್ನ ನೋಡಿದಾಗ

ಚಂದ ಕಾಣ್ತೀಯೆಂದು ಫೋಟೋ ತಗೆದಿದ್ದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ರಗ್ಗಿನ ಒಳಗೆ ರಾತ್ರಿ ಮೊಬೈಲಿನಲ್ಲಿ ಮಾತಾಡಿದಾಗ

ಅದನ್ನ ಅವ್ವ ಅಪ್ಪ ಕೇಳಿಸಿಕೊಂಡಾಗ

ರಾತ್ರಿ ಪುಸ್ತಕ ಓದ್ತಿದ್ದೆ ಎಂದು ಸುಳ್ಳು ಹೇಳಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಕನಸಿನ್ಯಾಗ ನೀ ಬಂದು ಕರದಂಗಾಗಿ

ಮಂಚದ ಮೇಲಿಂದ ಕೆಲ ಬಿದ್ದಾಗ

ಸೊಂಟ ಮುರಿದರು ನಿನ್ನ ನೆನಪಾಗಿ ನಗುತ ಎದ್ದಿದ್ದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಅಪ್ಪ ಅವ್ವಗ ನಮ್ಮ ಪ್ರೀತಿ ತಿಳಿದಾಗ

ನನ್ನ ಮ್ಯಾಲಿನ ಪ್ರೀತಿ ಅವರನ್ನ ಒಪ್ಪಿಸಿದಾಗ

ನನಗಾದ ಖುಷಿಗೆ ನಾ ಓಡಿ ಬಂದು ನಿನಗ ಅಪ್ಪಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಮದುವೀಗಿ ಒಂದು ವರುಷ ಕಳೆದಾಗ

ನಿನಗ ನನ್ನ ಮ್ಯಾಲಿನ ಪ್ರೀತಿ ಕಡಿಮಿ ಆದಾಗ

ನನ್ನನ್ನ ಮರೆತು ತಿರಗಿ ಬರಬ್ಯಾಡಂತ ಹೇಳಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ನನ್ನ ಪ್ರೀತಿ ಅವನು ಮರೆತಾಗ

ನಾ ಇದ್ದು ಜಗದಾಗ ಇಲ್ಲದಾಂಗ

ವಿಷ ಕುಡಿಯುವಾಗ ತವರಮನಿ ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ

ಸೋಮವಾರ, ಜುಲೈ 18, 2011

ನನ್ನವನು

ನಿನ್ನ ನೆನಪಿನ ಮೋಡ 
ಕಣ್ಣೀರಿನ ಮಳೆ ಸುರಿಸಿದೆ 
ಒದ್ದೆಯಾದ ಹೃದಯಕೆ 
ಕಾಣುವ ಬಯಕೆ ಹುಟ್ಟಿದೆ 
ಮಧುರ ಕ್ಷಣಗಳ ತಂಪು 
ನನ್ನೆದೆಯ ಬೆಚ್ಚಗೆ ಮಾಡಿದೆ 
ಮುಚ್ಚಿದ ಕಣ್ಣುಗಳಿಗೆ 
ನೀ ಮುತ್ತಿಟ್ಟ೦ತಾಗಿದೆ 
ಮನವು ತೇಲಿ ತೇಲಿ 
ಪ್ರೀತಿ ಸಾಗರದಲಿ ಮುಳುಗಿದೆ 
ನನ್ನುಸಿರು ನಿಂತರು 
ನಿನ್ನುಸಿರು ನನ್ನ ಬದುಕಿಸಿದೆ 
ಕನಸಿನಲ್ಲೂ ಮನಸ್ಸಿನಲ್ಲೂ 
ನಿನ್ನ ಪ್ರೀತಿ ನನ್ನದಾಗಿದೆ 

ಸೋಮವಾರ, ಜುಲೈ 4, 2011

ನನ್ನ ಕವನ ಸಂಕಲನದ ಆನಂದ

                                                    

       ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು . ಎರಡು ವರ್ಷದಲ್ಲಿ ನಾ ಕಂಡ ಕನಸ್ಸನ್ನು ನನಸಾಗಿ ಮಾಡಿದ    " ನನ್ನೆದೆಯ ಬಡಿತ 
                                ಪ್ರೀತಿಯ ಉಸಿರು 
                                ಒಲುಮೆಯ ಜೀವ ಜೀವಾಳ 
                                ಸಂಗಾತಿ ಡಾ.ಸಿದ್ದು ಅವರಿಗೆ ಅರ್ಪಣೆ ಮಾಡಿದ ಕವನ ಸಂಕಲನವಿದು.ನನ್ನ ದಾಂಪತ್ಯ ಜೀವನದಿಂದ ಆಯ್ದ ಪ್ರೀತಿಯ ಹನಿಗಳನ್ನು ಪೋಣಿಸಿ ಸುಂದರ ಹಾರವನ್ನು ಧರಿಸಿ ಹಸೆಯ ಮೇಲಿರುವಾಗ ಮೌನದ ಮನದಲ್ಲಿ ಮೂಡಿದ ಕವಿತೆಗಳಿವು.ಅವು 'ಹಸೆಯ ಮೇಲಣ ಹಾಡು'.
      ವಿಜಾಪೂರದ ಬುದ್ಧಿಜೀವಿ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಹಸ್ತದಿಂದ ಲೋಕಾರ್ಪಣೆಗೊಂಡ ನನ್ನ ಕವನ ಸಂಕಲನ ಬಹಳ ಪುಣ್ಯಗಳಿಸಿತ್ತು. ಆ ದಿನದ ಮತ್ತೊಂದು ವಿಶೇಷವೆಂದರೆ ಕವಿಗೊಷ್ಟಿಯು ಆಯೋಜಿಸಲಾಗಿತ್ತು. ನಾನು ಜಸ್ಟ್ ಪಾಸ್ ಆಗಿ ಕವಯತ್ರಿ ಪದವಿ ತೆಗೆದುಕೊಳ್ಳುತ್ತಿದ್ದೆ ಆದರೆ ಅಲ್ಲಿ ಉಳಿದ ೧೧ ಕವಿಗಳು ತುಂಬಾ ಮೆಚ್ಚುಗೆ ಪಡೆದವರಾಗಿದ್ದರು.ಅವರ ಜೊತೆ ನನಗೆ ಕವನ ಓದಲು ತುಂಬಾ ಖುಷಿಯೇನಿಸಿತ್ತು.ಅದೇ ದಿನ ಕವಿ ಮತ್ತು ಲೇಖಕ ಕಲ್ಲೇಶ ಕುಂಬಾರ ಅವರ 'ಉರಿಯ ನಾಲಿಗೆಯ ಮೇಲೆ' ಕಥಾಸಂಕಲನ ಲೋಕಾರ್ಪಣೆಯಾಯಿತು. 
      ಕವನ ಬರೆಯುವ ಕಲೆ ತವರಿನಲ್ಲಿ ಮೊಳೆತದ್ದು,ಚಿಗುರಿದ್ದು ಸಪ್ತಪದಿಯಲ್ಲಿ, ಹೂತಿದ್ದು ನಮ್ಮ ದಾಂಪತ್ಯದ ಹಸೆಯಲ್ಲಿ.ನನ್ನ ಬದುಕನ್ನು ಒಪ್ಪಿ ಅಪ್ಪಿ ಎದೆಯಲ್ಲಿ ಕವಿತೆಯ ಒರತೆ ತೊಡಿದವರು ನನ್ನ ಸಂಗಾತಿ.ಅವರೇ ನನ್ನ ಬದುಕಿನ ಪ್ರೀತಿಯ ಪ್ರತೀಕ.
      ನನ್ನ ಗುರುಗಳಾದ ಡಾ.ವಿ.ಎಸ.ಮಾಳಿಯವರು ಹಾರೂಗೆರಿಯವರು.ನನ್ನ ಕವನ ಸಂಕಲನದ ಹಿಂದಿನ ಪುಟವನ್ನು ತಮ್ಮ ಮನಸ್ಸಿನ ಚೆಂದಾದ ಮಾತುಗಳಿಂದ ಅಲಂಕರಿಸಿದವರು. ಇವರು ಹೇಳಿದ್ದು- 'ಕವಿತೆಗಳೆಂದರೆ ಅಕ್ಷರಗಳಲ್ಲಿ ಸಂವೇದನೆಗಳ ಸಾಕ್ಷಾತ್ಕಾರ'. ಮದುವೆಯ ಹೊಸತರಲ್ಲಿ ಕ್ಷಣ ಕ್ಷಣಗಳೆಲ್ಲ ಸುಂದರ ಮತ್ತು ಮಧುರ.ಸಲ್ಲಾಪದ ಮುದ್ದು ಮುದ್ದು ಮಾತುಗಳು ಜೇನಿನಲ್ಲಿ ಅದ್ದಿ ಇಟ್ಟಂತೆ ಕೀರ್ತಿಯವರ ಕವಿತೆಗಳು ಜಾಮೂನಿನಂತೆ! ಮುದ್ದನನಂಥ ಗಂಡನಿಗೆ ಮನೋರಮೆಯಮ್ಥ ಹೆಂಡತಿ ಜತೆಯಾದಾಗ ಇಂಥದೊಂದು 'ದಾಂಪತ್ಯ ಕಾವ್ಯ'ಹುಟ್ಟಿಕೊಳ್ಳುತ್ತದೆ.
     ಈ ಸಂಕಲನ ಹೊರಬರಲು ಪ್ರೇರಣೆ ನೀಡಿದ ಎಲ್ಲ ಬ್ಲಾಗ ಸ್ನೇಹಿತ-ಸ್ನೇಹಿತೆಯರೆಲ್ಲರಿಗೂ ನನ್ನ ಪ್ರೀತಿಯ ಕೃತಜ್ನ್ಯತೆಗಳು.ನನ್ನ ಕವನಗಳಿಗೆ ನೀವು ನೀಡಿದ ವಿಶ್ವಾಸ,ಪ್ರೀತಿ, ಸಹಕಾರ ಮತ್ತು ಸ್ಪೂರ್ತಿಗೆ ನನ್ನ ಅನಂತ ಧನ್ಯವಾದಗಳು .ಕೊನೆಯದಾಗಿ ಈ ಕೀರ್ತಿಯ ಕನಸು ನನಸಾಗಿಸಲು ಸಹಕರಿಸಿ ಹರಸಿರಿ.


ಬುಧವಾರ, ಮೇ 4, 2011

ಕವಿಮನ




ನಿರ್ಜೀವ ಕಲ್ಲಿನಲಿ
ಶಿಲಾಬಾಲೆಯ ಜೀವ ತುಂಬಿ 
ಸೌಂದರ್ಯದ ಕಣ್ಮಣಿ ಎಂಬ 
ಹೆಸರಿಟ್ಟವನೇ  ಕವಿ 

ನೀಲಿ ಆಗಸದಲಿ 
ಭಾವನೆಗಳ ಮೋಡ ಬಿತ್ತಿ 
ಖುಷಿಯ ಮುಂಗಾರು 
ಮಳೆ ಸುರಿಸುವವನೆ ಕವಿ 

ಗುಲಾಬಿ ಹೂವಿನಲಿ 
ಪ್ರೇಯಸಿಯ ಮುಖ ಬಿಡಿಸಿ 
ಭ್ರಮರವಾಗಿ ಮಕರಂದ 
ಹೀರುವವನೆ ಕವಿ 

ಇಬ್ಬನಿಯ ಹನಿಯಲಿ 
ವಜ್ರಗಳ ಹಾರ ಪೋಣಿಸಿ 
ಎಳೆಗಳ ಕೊರಳಿಗೆ 
ಹಾರ ಹಾಕುವವನೆ ಕವಿ 

ತುಂತುರು ಮಳೆಯಲಿ 
ಮುತ್ತಿನ ಮಳೆ ಸುರಿಸಿ 
ಪ್ರುಕ್ರತಿಯ ಸ್ನೇಹಿತಿಗೆ 
ನಕ್ಕು ನಲಿಸುವವನೆ ಕವಿ 

ರೈತರ ಬೆವರಿನಲಿ 
ಸುಖ-ದು:ಖಗಳನ್ನು ಬೆರೆಸಿ 
ಗಂಜಿಗೆ ಅಮೃತವೆಂದು 
ಹೆಸರಿಡುವವನೆ ಕವಿ 

ನೋಟಿನ ಅಹಮಿನಲಿ 
ಬಾಳುವ ಧಣಿಗಳ ಮನ 
ಕಲ್ಲು ಬಂಡೆಗೆ 
ಹೋಲಿಸುವವನೆ ಕವಿ 

ಮುಸ್ಸಂಜೆ ತಂಗಾಳಿಯಲಿ 
ಎಲೆಗಳ ಮಿಲನವಾಗಿಸಿ
ಮೊಗ್ಗಿಗೆ ಜೀವ 
ತುಂಬುವವನೆ ಕವಿ 

ಬೇಸಿಗೆಯ ಬಿಸಿಲಿನಲ್ಲಿ 
ಸೂರ್ಯನ ಕೋಪಕೆ ಬೆಂದು 
ಮುದುಡುವ ಹೂವಿಗೆ ಮಳೆ 
ಹನಿಯಾಗಿ ಮುದ್ದಿಸುವವನೆ ಕವಿ 

ದು:ಖಿಸುವ ಕಣ್ಣೀರಿನಲಿ 
ನೆನೆದ ರೆಪ್ಪೆಗಳಿಗೆ 
ಹೊಸ ಕನಸುಗಳನ್ನು 
ಕೊಡುವವನೇ ಕವಿ 

ಮೌನವಾದ ಮನಸಿನಲಿ 
ಪ್ರೀತಿಯ ಬೀಜ ಬಿತ್ತಿ 
ಪ್ರೇಮಲೋಕದ ಸುಖವ 
ಸ್ವರ್ಗವನ್ನಾಗಿಸುವವನೆ ಕವಿ 

ಪುಸ್ತಕದ ಪುಟದಲಿ 
ಪೆನ್ನಿಗೆ ರಾಜಪಟ್ಟ ಕೊಡಿಸಿ 
ಪ್ರಾಸ ಪದಗಳ ಮದುವೆ
ಮಾಡಿಸುವವನೆ ಕವಿ 

ಚಂದಿರನ ರಾತ್ರಿಯಲಿ 
ನೆಲಕೆ ಹೂಹಾಸಿ ಸುಖದ 
ಕನಸಿನಲಿ ದಿಂಬನ್ನು ಇನಿಯನೆಂದು 
ಅಪ್ಪಿಕೊಳ್ಳುವವನೆ ಕವಿ 

ಮುದ್ದು ಮಕ್ಕಳಲಿ 
ಹೊಳೆಯುವ ನಕ್ಷತ್ರ ಕಂಡು 
ಚಂದ್ರಮನ ಜೊತೆಯಲಿ 
ಆಟವಾಡಿಸುವವನೆ ಕವಿ 

ಹಾರುವ ಹಕ್ಕಿಗಳಲಿ 
ಆಕಾಶ ಮುಟ್ಟಿದ ಸಾಹಸ ತುಂಬಿ 
ಹಾಡು ಹಾಡುತಿವೆಂದು 
ಹೊಗಳುವವನೆ ಕವಿ 

ಕನಸಿನ ಕಲ್ಪನೆಯಲಿ 
ಬವಣೆಗಳ ಸುನಾಮಿ  ಎಬ್ಬಿಸಿ 
ವಾಸ್ತವದಲಿ ಕಾಲ್ಪನಿಕತೆ 
ಹುಡುಕುವವನೆ ಕವಿ 

ಅಮವಾಸ್ಯೆಯಲಿ 
ಚಂದ್ರಮನ ತೋರಿಸಿ 
ಬೇಸಗಿಯಲಿ  ತಂಗಾಳಿಗೆ 
ಆಮಂತ್ರಿಸುವವನೆ  ಕವಿ 

ಪ್ರೇಯಸಿಯ ಮೌನದಲಿ  
ಹೃದಯದ ಮಾತು ಕೇಳಿಸಿ 
ಉಸಿರು ನಿಂತರು ಪ್ರೀತಿಯನು 
ನೆನಪಿಸುವವನೆ ಕವಿ .. 


ಭಾನುವಾರ, ಮೇ 1, 2011

ಮುಂಗಾರು ಮಳೆಯಲಿ




ಹನಿ ಹನಿ ಮಳೆ
ನೆನೆದ ಮುಂದಲೆ
ಹಣೆಯ ಮೇಲೆ ಜಾರಿ
ಕಣ್ರೆಪ್ಪೆಯ ಮೇಲುರುಳಿ... .

ಸರಳ ಮೂಗ ಮೇಲೆ
ಸರ್ರ ಭರ್ರನೆ ಜಾರಿ
ಗುಲಾಬಿ ತುಟಿಗೆ
ಪ್ರೀತಿಯ ಮುತ್ತಿಟ್ಟು

ಸುಂದರ ಮಿಲನಕೆ
ಕಾಯುವ ಚಿಪ್ಪೆಯ
ಎದೆಗೆ ಅಪ್ಪಿ
ಮುತ್ತಾಗಿ ಹುಟ್ಟಿ

ಕನಸಿನ ಬೆಡಗಿಗೆ
ಮುತ್ತಿನ ಹಾರಾಗಿ
ಕುತ್ತಿಗೆಗೆ ಮುತ್ತಿಟ್ಟು
ಖುಷಿ ಪಟ್ಟ ಹನಿ...

ಶನಿವಾರ, ಏಪ್ರಿಲ್ 30, 2011

ನನ್ನ ಮರೆತು ಬಿಡು


ನಾ ದೂರ ಹೋದರು 
ನೀ ಬಂದೆ ಹತ್ತಿರ 
ನಾ ಓದಿ ಹೊರಟರು 
ನಿನಗೆ ಕಾಡುವ ಆತುರ 
ನೀ ಬರಬಾರದೆಂದು 
ಮುಚ್ಚಿದ್ದೆ ನಾ ಬಾಗಿಲು 
ಕಿಟಕಿಯಿಂದ ಬಂದೆ ನೀ 
ನನ್ನನ್ನು ನೋಡಲು 
ಸ್ಪರ್ಶ ಸುಖಕೆ ಹಾತೊರೆದು 
ಬಂದಿಹನು ನೋಡು 
ಸದ್ದಿಲ್ಲದೇ ಮುತ್ತು ಕೊಟ್ಟ 
ಕಳ್ಳ ನಲ್ಲ ನೋಡು 
ತುಟಿಯ ಅಂಚಿನಲ್ಲಿ 
ಬಣ್ಣವು ಕೆಂಪು 
ಚಪ್ಪಾಳೆಗೆ ಸಿಲುಕೆ 
ಸೊಳ್ಳೆ ಆಯಿತು ಚಿಪ್ಪು ...

ಹುಡುಗಿ


ಹಡೆದವ್ವ ನೀಡುವಳು ತುತ್ತು 
ಮಮತೆಯ ಸಾಗರಕೆ ಸೇರುವ ಮುನ್ನ 
ತೊದಲು ನುಡಿಗೆ ಮುತ್ತು ಕೊಟ್ಟಾಗ 
ತಾಯಿಯ ಒಲವಿನ ಸಂಕೇತವು 
ನೆನಪಿನಲ್ಲಿ ಮುಳುಗಿದ ಹುಡುಗಿಗೆ 


ಆಗಸದಿಂದ ಬರುವ ಮುತ್ತು 
ನೆಲಕೆ ಮುತ್ತಿಡುವ ಮುನ್ನ 
ಕೆನ್ನೆಯ ಮೇಲೆ ಕುಣಿದಾಡುವಾಗ
ರೋಮಾಂಚನ ಪ್ರೀತಿ ಸಂಕೇತವು 
ಮಳೆಯಲ್ಲಿ ನೆನೆದ ಹುಡುಗಿಗೆ ..

ಕಾಲೇಜಿಗೆ ಹೋಗುವ ಹೊತ್ತು 
ಬಯಕೆಯು ಚಿಗುರುವ ಮುನ್ನ 
ಮನವು ಸುಮ್ಮನೆ ನಗುತಿರುವಾಗ 
ಗೆಳೆಯನ ಪ್ರೀತಿ ಸಂಕೇತವು 
ಸುಂದರವೆನಿಸಿದೆ ಜೀವನ ಹುಡುಗಿಗೆ ..




ಹರುಷ ತಂದ ವರುಷ


ಮದುವೆಯಾದ ವರುಷದಲಿ 
ಸತಿಪತಿಗಳಿಬ್ಬರು ಹರುಷದಲಿ 

ಮುಂಜಾವಿನ ಹೊತ್ತಲ್ಲಿ 
ಅಪ್ಪಿದ್ದರು ಕನಸಿನಲಿ 

ಕಣ್ತೆರೆದು ನೋಡಿದಾಗ 
ನಕ್ಕಿದ್ದರು ಮನಸಿನಲಿ 

ಮುತ್ತಿಟ್ಟು ಓಡಿದಾಗ
ಕರಗಿದ್ದರು ನಾಚಿಕೆಯಲಿ 

ಮರೆತಿದ್ದರು ಲೋಕವನ್ನು 
ಸ್ಪರ್ಶದ ಸುಖದಲಿ 

ಹತ್ತಿದರು ಮಂಚವನು 
ಪ್ರೀತಿಯ ನಶೆಯಲ್ಲಿ 

ರವಿ ಮೂಡಿ ಬೆಳಕಾದರೂ 
ತೆಲಿದ್ದರು ಚಂದ್ರಮನ ಲೋಕದಲಿ 

ಪ್ರೇಮದ ಹನಿ ಸವಿದು 
ಮದುವೆಯಾದ ವರುಷದಲಿ 
ಸತಿಪತಿಗಳಿಬ್ಬರು ಹರುಷದಲಿ 



ಉಲ್ಲಾಸ



ಮೊದಲ ಸಲ ನಿನ್ನ ಕಂಡಾಗ 
ಕಪ್ಪೆ ಚಿಪ್ಪಿನ ಮುತ್ತಾಗಿ 
ಮನದಲ್ಲಿ ಬಚ್ಚಿಕೊಂಡಿದ್ದೆ 

ಮುಂಗಾರು ಮಳೆಯಲಿ ಕೊಡೆಯಾಗಿ
ಬಿಸಿಲಿನಲ್ಲಿ ತಂಗಾಳಿಯಾಗಿ 
ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ 

ಆಸೆಯೆಂಬ ಬಣ್ಣದ ಕಾಮನಬಿಲ್ಲಾಗಿ 
ಕೋಗಿಲೆ ಧ್ವನಿಯ ಇಂಪಾಗಿ 
ನಲಿದು ಗರಿ ಬಿಚ್ಚಿ ಕುಣಿದಿದ್ದೆ 

ಗುರುವಾರ, ಏಪ್ರಿಲ್ 28, 2011

ಪೆನ್ನಿಗಾಗಿ

ಏನೆಂದು ಬರೆಯಲಿ ಕವನದಲಿ 
ಪದಗಳು ಸಾಲಾಗಿ ಬಂದಿವೆ 
ಪ್ರಾಸಗಳು ನಾ ಮುಂದು ಎಂದಿವೆ 
ನೆನಪುಗಳು ಅರಸನಾಗಿ ಆಳಿವೆ 
ಭಾವನೆಗಳು ಹಬ್ಬ ಆಚರಿಸಿವೆ 
ಮೌನ ಹೃದಯಕೆ ಅಂಟಿಕೊಂಡಿದೆ 
ನಗುವು ಅಕ್ಷರಕೆ  ಪಾಠ  ಹೇಳಿದೆ 
ಆಸೆಯು ಕಲಾಕುಂಚದಲಿ ಅರಳಿದೆ 
ಮನಸಿನ ಪುಟಕೆ ಖುಷಿಯಾಗಿದೆ 



ಸೋಮವಾರ, ಏಪ್ರಿಲ್ 25, 2011

ಬೇಸರವೇಕೆ ?



ಕಪ್ಪು ಮೋಡಗಳೇ ಏಕಿಷ್ಟು ಬೇಸರ 
ಮೌನವೇಕೆ ಮನದಲಿ ಕೊರಗುತಿಹನು ನೇಸರ 

ತಂಗಾಳಿ ಮೇಲೇಕೆ ಸಿಟ್ಟು 
ಬಿಸಿಲು ಕುಂದಿದೆ ತಲೆ ಕೆಟ್ಟು 
ನಿನ್ನ ಕೋಪಕೆ ಏನು ಕಾರಣ 
ಪ್ರೀತಿಯಿಂದ ಕೇಳಿದ ವರುಣ 
ಮುಗಿಲಿನ ಬೇಸರಕೆ ನಾನಾದೆ ಮೋಡ
ಕವಿ ಮನ ನುಡಿದಿದೆ ದು:ಖಿಸ ಬೇಡ 
ಸುಂದರವಾಗಿ ವರ್ಣಿಸಿದ ಕವಿ ಕಪ್ಪು ಕಾರ್ಮೋಡ 
ಖುಷಿಯಾದ ಮೋಡ ಕರಗಿದೆ ನೋಡ 
ದು:ಖದ ಹನಿಗಳು ಖುಷಿಯಾಗಿ ಕೊಟ್ಟು 
ಮನಗಳ ಬೇಸರ ಓಡಿಸಿ ಬಿಟ್ಟು 
ಸ್ವಾತಿ ಮುತ್ತಿನ ಮಳೆಹನಿಯಾಗಿ 
ಸಂತಸದ ಮಾತು ಕವಿಗಲಿಗಾಗಿ 
ಹನಿ ಹನಿಗಳ ಪದ ಜೋಡಿಸಿ 
ಕವನ ಬರೆದ ಪ್ರೀತಿ ಮೂಡಿಸಿ 
ಕೊನೆಯಾಗಿದೆ ನೋವು ಮೋಡಗಳಿಗೆ 
ಸಂತೋಷ ಮೂಡಿದೆ ಪ್ರಕೃತಿಯ ಸೌಂದರ್ಯಕೆ

ಕಪ್ಪು ಮೋಡಗಳೇ ಏಕಿಷ್ಟು ಬೇಸರ 
ಮೌನವೇಕೆ ಮನದಲಿ ಕೊರಗುತಿಹನು ನೇಸರ 




.

ಪ್ರೀತಿಯಲ್ಲಿರುವೆ ನಲ್ಲ ..

.

ನಲ್ಲ , ನಿನ್ನ ವರ್ಣನೆ ಬಲು ಚೆನ್ನ 
ಸಂಜೆಯ ಹೊತ್ತಲ್ಲಿ ನಾ ನಿನ್ನ ಪಕ್ಕಕೆ 
ಮೌನ ಮಾತಾಡಿ ಪ್ರೀತಿಸು ಎಂದಿದೆ 

ನಲ್ಲ , ನಿನ್ನ ಪ್ರೀತಿಸುವ ಬಯಕೆ 
ಏಕಾಂತ ತಂದಿದೆ ಬೆಟ್ಟದಷ್ಟು ಕೊರತೆ 
ರೆಕ್ಕೆ ಬಿಚ್ಚಿ ಜೊತೆಯಲಿ ಹಾರುವ ಎಂದಿದೆ 

ನಲ್ಲ , ನಿನ್ನ ಮನಸ್ಸು ಕಾಮನಬಿಲ್ಲು 
ಬಣ್ಣ ತುಂಬಿದೆ ಪ್ರೀತಿಯ  ಹನಿಯಲ್ಲೂ 
ಪ್ರೇಮದ ಹೊಳೆಯಲಿ ಹರಿಯುವಾ ಎಂದಿದೆ 


ನೀನು ಕೆಟ್ಟವ


ಏಕೆ ಹುಟ್ಟಿಸಿದ ದೇವರು 
ಪಾಪಿ ಹೃದಯವನ್ನು 
ನೆಮ್ಮದಿಯನು ಹಾಳು ಮಾಡುವ 
ರಾಕ್ಷಸ  ಸ್ವಭಾವದವನ 
ಬೆಳಕನ್ನು ಇರುಳಾಗಿಸುವ
ಕೆಟ್ಟ ಬಯಕೆಯನ್ನು 
ನಂಬಿಕೆಯ ಚಿಹ್ನೆ ಅಳಿಸಿ 
ಮೋಸದ ಬಾವುಟ  ಹಾರಿಸುವವನ 

ಪ್ರೀತಿ ಕಿತ್ತೆಸೆದು ದ್ವೇಷ 
ಬೆಳೆಸುವ ಕ್ರೂರಿಯನ್ನು 
ಸತ್ಯದ ಸಂತೆಯಲಿ 
ಸುಳ್ಳು ದುರಾಸೆಯ ಹುಟ್ಟಿಸುವವನ
ಸಂಬಂಧಗಳ ಅವಮಾನಿಸಿ 
ಹೃದಯಾಘಾತ ತರುವವನ 
ಬೆಳಗಿನಲ್ಲೊಂದು ಕತ್ತಲೆಯಲ್ಲೊಂದು 
ದು:ಖದ ಬುಗುರಿ ಆಟವಾಡಿಸುವವನ
ಜೀವಿಸಲು ಬಿಡದೆ ಸಾಯಲು ಬಿಡದೆ 
ದು:ಖಸಾಗರಕೆ ತಳ್ಳಿದ ಮೆಲ್ಲನೆ ನನ್ನ 

ಶನಿವಾರ, ಏಪ್ರಿಲ್ 23, 2011

ಇಲ್ಲದ ಉತ್ತರಕೆ ಪ್ರಶ್ನೆಗಳೆಕೆ ?



ಅಮಾವಾಸ್ಯೆಯ ರಾತ್ರಿಯಲಿ 
ಬೆಳದಿಂಗಳು ಕಾಣುವುದೇ ?
ಬಳ್ಳಿಗೆ ಮೊಗ್ಗಾಗದೆ 
ಹೂವು ಬಿಡುವುದೇ ?

ಸುಂದರ ಮಳೆಯ ಹನಿಯನ್ನು 
ಬೊಗಸಿನಲ್ಲಿಡಲು ಸಾಧ್ಯವೇ ?
ಬೀಸುವ ಗಾಳಿಗೆ 
ಬೇಡವೆಂದರೆ ನಿಲ್ಲುವುದೇ?

ಸೂರ್ಯನ ಕಿರಣವನ್ನು 
ಸ್ಪರ್ಶಿಸಲು ಆಗುವುದೇ ?
ಕೇಳುವ ಪ್ರಶ್ನೆಗಳಿಗೆಲ್ಲ 
ದೇವರು ಉತ್ತರಿಸುವನೆ ?

ಕನಸೊಡೆದು ಚೂರಾದಾಗ 
ಹೃದಯ ಕಿತ್ತೆಸೆಯುವುದೇ ?
ಪ್ರಶ್ನೆಗೊಂದು ಉತ್ತರ 
ಉತ್ತರಗಳಿಗೆ ಪ್ರಶ್ನೆ ಇದೆಯೇ ?
ಭೂಮಿ ಆಗಸ 
ಎಂದಾದರೂ ಒಂದಾಗುವುದೇ ?


ಅವನು ಯಾರು ?



ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು 

ನೆನಪಿನ ನೆಪವಾಗಿ ಬರುವವನು 
ಮಾತಿನಲಿ ಮಾನವ ಗೆದ್ದವನು 
ಸ್ಪರ್ಶದಲಿ ರಂಗೋಲಿ ಬಿಡಿಸಿದವನು 
ಪ್ರೀತಿಸಿ ಹೃದಯ ಕದ್ದವನು
ಅವನು ಯಾರು ?


ದು:ಖದಲಿ ರೆಪ್ಪೆಯಾಗಿ ನೆನೆದವನು 
ಕತ್ತಲಲಿ ಬೆಳಕಾಗಿ ಬಂದವನು 
ಚಿಂತೆಯಲಿ ನಿದ್ದೆಯಾಗಿ ಮಲಗಿಸಿದವನು 
ಭಾವನೆಗಳ ಗೋಡೆಗೆ ಬಣ್ಣವಾದವನು
ಅವನು ಯಾರು ?


ಮೌನದಲಿ ನೆನಪಾಗಿ ನಗಿಸಿದವನು 
ರಾತ್ರಿಯಲಿ ಕನಸಾಗಿ ಜೊತೆ ಬರುವವನು
ಕನಸಿನಲಿ ಪ್ರೀತಿಯ ಓಲೆ ಬರೆದವನು 
ನನ್ನುಸಿರು ನಿಂತಾಗ ನಿಟ್ಟುಸಿರು ಬಿಟ್ಟವನು 

ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು 

ಶುಕ್ರವಾರ, ಏಪ್ರಿಲ್ 22, 2011

ಚಂದಿರ



ಚಂದಿರ ನಿನ್ನ ರೂಪ 
ಅಮೋಘ ಸುಂದರ 
ನಿನ್ನ ಪ್ರತಿಬಿಂಬ 
ಪ್ರೀತಿಯ ಮಂದಿರ 
ವಿಶಾಲ ಭೂಮಿಗೆ ನಿನ್ನ 
ಬೆಳಕೇ ಮಾಡುವೆ ಹಂದರ 
ಕತ್ತಲೆಗೂ ಪ್ರೀತಿ ತೋರಿಸುವ 
ಸುಂದರ ಚಂದಿರ 

ಮುಂಜಾನೆಯ ಮಳೆರಾಯ ಖುಷಿ ತಂದ

      

    ಮಳೆಹನಿಗಳು ಮೂಗಿಲೆದೆಯ ಸೀಳಿ ಮುತ್ತುಗಳಾಗಿ ಧರೆಗಿಳಿದು ಬರುವಾಗ ಭೂಮಿ ತಾಯಿಯ ಕೈ ಮಾಡಿ ಹನಿಗಳನ್ನು ಬರ ಹೇಳಿದೆ . ನಾ ಮೊದಲು ನೀ ಮೊದಲು ಹೇಳುವ ರೀತಿ ಅಪ್ಪಿಕೊಳ್ಳುವ ಆಸೆಯಲ್ಲಿ ಹನಿಗಳು ವೇಗವಾಗಿ ಭೂಮಿಗೆ ತಲುಪುತಿವೆ . ಆ ಆಸೆಯಲಿ ಚಿಟಪಟ ಶಬ್ದ ಮಾಡಿ ಹನಿಗಳು ಕೂಗುತಿವೆ . ಒಂದಲ್ಲ , ಎರಡಲ್ಲ , ಲೆಕ್ಕವಿಲ್ಲದಷ್ಟು ಹನಿಗಳು ಒಂದೇ ಮಡಿಲಿಗೆ ಸೇರಿ ನಿಸರ್ಗಕ್ಕೆ ಸಂಭ್ರಮವನ್ನುಂಟು ಮಾಡಿವೆ . ಭೇದ ಭಾವವಿಲ್ಲದೆ ಗಿಡ, ಮರ , ಬಳ್ಳಿ, ಹೂ , ನೆಲ, ಛಪ್ಪರ , ಅರಮನೆ ಎನ್ನದೆ ಎಲ್ಲರಿಗೂ ಸಮಾನವಾದ ಮಲೆಹನಿಗಳನ್ನು ಆನಂದದಿಂದ ನೀಡಿವೆ . ತಂಗಾಳಿಯು 'ಮಳೆರಾಯ ಬಂದ ಖುಷಿಯನ್ನು ತಂದ ' ಎಂದು ಸಾರುತಿದೆ . ಖುಷಿಯಾದ ಗುಡುಗು ಮಲೆರಾಜನ ಸ್ವಾಗತಿಸಲು ಆರ್ಭಟಿಸುವ ರೀತಿ ಗರ್ಜಿಸಿ ಸ್ವಾಗತ ಕೋರುತಿದೆ.
 ನೀ ಹನಿಯಾಗಿ ಹರಿದರೆ ನಾ ಹೊಳೆಯುವ ನಿನಗಾಗಿ ಎನ್ನುವ ರೀತಿ ಮಿಂಚು ಮಿರ ಮಿರನೆ ಹೊಳೆಯುತಿದೆ .
ಕಾಯುತ್ತಿರುವೆ ನಿನಗಾಗಿ ಬಾ ಬೇಗ ಮಳೆರಾಯ 
ಸುಖ ಶಾಂತಿ ನೀಡು ಬಾ ತಣ್ಣನೆಯ ಮಳೆರಾಯ 
ಎಂದು ಮನದಲ್ಲಿ ಗುನಗುನಿಸುವ ಭೂಮಿಯ ನಿನ್ನ ಸ್ಪರ್ಶದ ಸುಖಕ್ಕಾಗಿ ಕಾಯುತಿದೆ . ನೀ ಬಂದ ಕ್ಷಣದಲ್ಲಿ ಹಕ್ಕಿಗಳು ಚಿಲಿ ಪಿಳಿ ಹಾಡುತಿವೆ. ಮೊಗ್ಗು ಖುಷಿಯಿಂದ ಅರಳುತಿದೆ . ಹಸಿರಾದ ಎಲೆಗಳು ಚಿಗುರುವ ಬಯಕೆಯು ಹೊತ್ತಿವೆ .ಬಿಸಿಲಿಗೆ ಕಾದು ಬಿಸಿಯಾದ ಮಣ್ಣು ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದ ಸುಂದರ ಮಧುರ ಸುವಾಸನೆಯನ್ನು ನಿಸರ್ಗಕೆ ಕಾಣಿಕೆಯಾಗಿ ನೀಡಿದೆ . ನಿಸರ್ಗವು ಖುಷಿಯಿಂದ ಹೊಸ ದಿನದ ಹೊಸ ಕ್ಷನಕೆ ಹೊಸದಾದ ಬಯಕೆಯ ಬೀಜವಿತ್ತು ಜೀವಾಳದ ಜೀವನಕೆ ಹೊಸ ರೂಪ ನೀಡಿ ಎಲ್ಲ ಸುಖಗಳಿಗೆ ಒಂದೇ ಬಾರಿ ಆಮಂತ್ರಣ ನೀಡಿದೆ ..


ನೀನೇಕೆ ಪ್ರೀತಿಸುವೆ ?


ಮರೆತೆನು ನಿನ್ನ ನೆನಪುಗಳ 
ಮರೆಯಲಿಲ್ಲ ನೀನು 
ಕೊಲ್ಲಿದರು ನಿನ್ನ ಹೃದಯವ 
ಪ್ರೀತಿಸುತ್ತಿರುವೆ ನೀನು 
ಅಳಿಸಿದರು ನಿನ್ನ ಕನಸುಗಳ 
ಕೊರಗಲಿಲ್ಲ ನೀನು 
ಸುಟ್ಟರು ನಿನ್ನ ಭಾವಗಳ 
ಜೋತೆಯಲ್ಲಿರುವೆ ನೀನು 
ದ್ವೇಷಿಸಿದೆ ನಿನ್ನ ಪ್ರೀತಿಯ 
ಜೀವ ತೊರೆದೆ ನೀನು 
ಕ್ಷಮೆ ಕೇಳಿದೆ ನನ್ನ ತಪ್ಪಿಗೆ 
ಮಳೆಯಾಗಿ ಕನ್ನೀರಿಟ್ಟೆ ನೀನು 


ಆಕಸ್ಮಿಕ ಮಳೆ


ತುಂತುರು ಮಳೆಹನಿಯ 
ಚಿತಪಿತ ಶಬ್ದದಲಿ 
ಮುತ್ತಿನ ರಾಶಿಯು 
ಭೂಮಿಗಿಳಿದು ಬರುತಿದೆ 
ಮೋಡಗಳು ಮಾಯವಾದ 
ಬಿಳಿ ಆಗಸದಲಿ 
ಬಣ್ಣ ಬಿಡಿಸಲೆಂಬ
ಆಸೆಯೊಂದು ಬೆಳೆದಿದೆ 
ತಂಪಾದ ಭೂಮಿಯ 
ಮಣ್ಣಿನ ವಾಸನೆಯಲಿ 
ಹುಟ್ಟಿ ಬೆಳೆದ ಗಿಡವು 
ಖುಷಿಯಾಗಿ ನಗುತಿದೆ 
ಅರಳಿದ ಹೂವಿಗೆ 
ಹನಿಯ ಸ್ಪರ್ಶವಾಗಿ 
ಪ್ರೀತಿ ಭಾವದಿಂದ 
ತಲ್ಲೀನವಾಗಿದೆ 
ನಿಸರ್ಗದ ಸುಖಕೆ 
ಮಳೆಯೊಂದು ಸಾಕ್ಷಿ 
ಮುಗಿಲಿನ ಮನದಲಿ 
ಆನಂದ ಮೂಡಿಸಿದೆ 


ಮಂಗಳವಾರ, ಏಪ್ರಿಲ್ 12, 2011

ಅಂ(ಇಂ)ದು ಹೇಗಿ(ದೆ)ತ್ತು ?

ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ 
ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ 
ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ
ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ 
ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ 
ನಿನ್ನ ಪ್ರೀತಿಯಿಂದ ನಾನಾದೆ ಪ್ರೇಮ ಕವನ 
ನೀನಿಲ್ಲದೆ ಬಾಳುವ ಆಸೆ ಎಲ್ಲಿ  ಇನಿಯ 
ಜೀವನಕೆ ಹೊಸ ಜೀವ ನೀಡಿರುವ ಇನಿಯ 
ಬಯಕೆಗಳು ಬತ್ತಿ ಬೆಂದು ಹೋದ ಸಮಯ 
ಬಂದಿರುವಾಗ ನೀನು ಖುಷಿಯಿಂದ ಹಾರುವ ಸಮಯ 
ದು:ಖದ ನೆನಪುಗಳು ಕಾಡುವುದು ಮನವ
ನಿನ್ನ ಪ್ರೀತಿಯ ಮನಸ್ಸು ಕದ್ದಿದೆ ಮನವ 
ಬೇಸರದ ಕೆಟ್ಟ ನೆನಪು ಬರದಿರಲಿ ಗೆಳೆಯ 
ಮನಸಾರೆ ಪ್ರೀತಿಸುವೆ ಜೀವಾಳದ ಗೆಳೆಯ 


ಭಾನುವಾರ, ಏಪ್ರಿಲ್ 10, 2011

ಬೇಗ ಬಾ ಇನಿಯ

ಏಕೋ ಏನೋ ತಿಳಿಯೆನು 
ಮನಸ್ಸು ನಿನ್ನ ಹುಡುಕುತಿದೆ 
ನಿನ್ನ ನೋಡುವ ಬಯಕೆಯು 
ಬೆಟ್ಟವಾಗಿ ಬೆಳೆಯುತಿದೆ 
ಎಲ್ಲಿ ಎಂದು ಹುಡುಕಲಿ ನಾನು 
ಹೀಜೆ ಗುರುತು ಕಾಣೆಯಾಗಿದೆ 
ನಿನ್ನ ನೆನಪು ಕಾಡಿ ಕಾಡಿ 
ನಯನಗಳು ಸೋತಿವೆ 
ಬೇಡವೆಂದರು ಹೃದಯ ಕೇಳದು 
ಪ್ರೀತಿ ಬೆನ್ನು ಹತ್ತಿದೆ 
ಹೆಸರು ತಿಳಿಯದೆ ಅಲೆದು ಅಲೆದು
ಮುಖ ಮುದುಡಿದ ಹೂವಾಗಿದೆ 
ಕಾಯುವೆ ನಾನು ಜನುಮವಿಡಿ 
ಬೇಗ ಬರುವೆಯಾ ಹೇಳು ನೀ ..


ಮದುಮಗಳು

ನೀರೆ ಉಡುವಳು ರೇಷ್ಮೆ ಸೀರೆ 
ಖುಷಿಯ ಗಳಿಗೆ ದಾರದ ಎಳೆಗೆ
ಅವಳ ಹಸಿರು ಗಾಜಿನ ಬಳೆಗಳು 
ಸದ್ದು ಮಾಡುವ ಮನದ ಮಾತುಗಳು 
ಹಣೆ ಮೇಲೊಂದು ಕುಂಕುಮ ಬೊಟ್ಟು 
ಮುಖದ ಸೌಂದರ್ಯಕೆ ಮೆರಗು ತರುವಳು 
ಮೂಗಿಗೊಂದು ಹೊಳೆಯುವ ಮೂಗುತಿ 
ಎಲ್ಲರ ಮನವ ಸೆರೆ ಹಿಡಿಯುವಳು 
ಕಾಲ್ಗೆಜ್ಜೆಯ ಸದ್ದು ಮಾಡಿ ನಡೆಯುತ 
ಸೂಕ್ಷ್ಮ ಸ್ಪರ್ಶದ ಸುಖವನು ಕೊಡುವಳು 
ಕೈ ಯಲ್ಲಿ ಮದರಂಗಿ ಚಿತ್ತಾರ ಮೂಡಿಸಿ 
ಮದುವೆ ಕವನದ ಅರ್ಥ ಬಿಡಿಸುವಳು 
ಬೆರಳಿಗೆ ಸುತ್ತಿದ ಬೆಳ್ಳಿ ಕಾಲುಂಗರು
ಶುಭ ಹೆಜ್ಜೆ ಇಟ್ಟು ಅಂದವಾಗಿಸುವಳು
ಜಡೆಗೆ ಮೂಡಿದ ಮಲ್ಲಿಗೆ ಹಾರ 
ಸುಂದರತೆಯ ಪರಿಮಳ ಬೀರುವಳು 
ಜೊತೆಗಾರನ ಜೋರೆಯಲಿ ಸಪ್ತಪದಿ 
ತುಳಿದು ಜೀವನ ಹೊಸದಾಗಿಸುವಳು 



ಶುಕ್ರವಾರ, ಏಪ್ರಿಲ್ 8, 2011

ನೆನಪಿನ ಅಲೆಗಳು ಭಾರವಾದವೇ ?


ಗರಿ ಬಿಚ್ಚಿ ಮನವು 
ಕುಣಿಯುವಾಗ 
ಸಂತಸದ ಹೊಳೆಯಲ್ಲಿ 
ಹರಿಯುವಾಗ 
ದು:ಖದ ನೆನಪಿನ 
ಮೋಡವಾಯಿತು
ಕಣ್ಣೀರಿನ ಮಳೆಯಲ್ಲಿ 
ನೆನೆಯಬೇಕಾಯಿತು 
ಬೇಡವಾದರು ಆ ದಿನ 
ಹತ್ತಿರ ಬರುತಿದೆ 
ಬೆಳಕಿಗಾಗಿ ಕಾದರು 
ಕತ್ತಲು ಹರಡುತಿದೆ 
ಚಿಂತೆಯ ಚಿತೆಯಲ್ಲಿ 
ಮನಸ್ಸು ಅಂಗಾರವಾಗಿದೆ
ಮೈ ಸುಡುವ ನೆನಪುಗಳು 
ನೋವಾಗಿ ಮರುಕಳಿಸಿತು 
ನಗುವಿನ ದಾರಿ 
ಮಾಯವಾಯಿತು 
ಸುಖಮಯ ಜೀವನ 
ಕುರುಡನ ಕಣ್ಣಾಯಿತು

ಬುಧವಾರ, ಏಪ್ರಿಲ್ 6, 2011

ಆಸೆಗೊಂದು ಕವನ



ಕವಿಯತ್ರಿ ಆಗುವ ಆಸೆ
ಮನ ತುಂಬ ಮಹದಾಸೆ 

ಪದಗಳಿಗೆ ಪದ ಪೋಣಿಸುವಾಸೆ 
ಸ್ವರಗಳಿಗೆ ಸ್ವರ ಸೇರಿಸುವಾಸೆ 
ಪ್ರಾಸಗಳ ಮದುವೆ ಮಾಡಿಸುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ಕನಸೆಲ್ಲ ನನಸಾಗಿಸುವಾಸೆ 
ದಿನದಲ್ಲಿ ಚಂದ್ರನ ತೋರಿಸುವಾಸೆ 
ಕಲ್ಪನೆಯ ಕಡಲಲ್ಲಿ ತೇಲಾಡುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ಬುವಿಯ ರೂಪ ವರ್ಣಿಸುವಾಸೆ
ಮೋಡದಲ್ಲಿ ಮನೆ ಕಟ್ಟುವಾಸೆ
ಸೂರ್ಯ ಚಂದ್ರರಲ್ಲಿ ಪ್ರೀತಿ ಹುಟ್ಟಿಸುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ನಯನಗಳ ಮಾತಿನಲಿ ಸ್ವರ್ಗ ತೋರಿಸುವಾಸೆ 
ಮೌನವಾದ  ಬಂಡೆಯಲ್ಲಿ ಶಬ್ದ ಹೊರಡಿಸುವಾಸೆ 
ಕುರುಡನಿಗೆ ಬಣ್ಣವ ಗುರುತಿಸುವಾಸೆ 
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ







ಶನಿವಾರ, ಮಾರ್ಚ್ 26, 2011

ಗಗನ ಮುಟ್ಟುವ ಬಯಕೆ

ಬಡವಿ ನಾನು ಈ ಭೂಮಿಗೆ 
ಎಡವಿದೆ ಆಸೆಯ ಲೋಕಕೆ 
ಹೆಜ್ಜೆ ಹೆಜ್ಜೆಗೂ ಬಯಕೆಯೇ 
ಮನಸು ಕರಗಿದೆ ಕಾವ್ಯಕೆ 

ಮೊಗ್ಗಿಲ್ಲದ ಹೂವು ಅರಳಿದೆ 
ದಿಕ್ಕು ಕಾಣದೆ ಮನ ಸೋತಿದೆ 
ಚಂದರನ ಹತ್ತಿರ ಹೋಗಬೇಕೆ 
ಹಕ್ಕಿಯ ರೆಕ್ಕೆಯಾಗಿ ಹಾರಬೇಕೆ 

ಅಂಗಾಲು ಭೂಮಿಯ ಎದೆಗೆ ಅಪ್ಪಿದೆ 
ಮನಸು ಗಗನಕೆ ಮುಟ್ಟಿದೆ 
ಬೇಡವೆಂದರು ಮಾತು ಕೇಳದೆ 
ಕನಸಲಿ ಬಯಕೆಯು  ಹುಟ್ಟಿ ಖುಷಿಯಿದೆ 

ಅನಂತ ಬೆಳಗುವ ಜೀವನದ ದೀಪ 
ಬಯಕೆಯ ಎಣ್ಣೆಯಾಗಿ ಕರಗಿದೆ 
ಗಗನ ಮುಟ್ಟುವ ಬಯಕೆ ಬಿಡದು 
ಕನಸು ಕಾಣುವ ಮನಸು ಇರದು 



ಕನಸಿನ ಹುಡುಗಿ


ಬಿಳಿ ಬಟ್ಟೆ ಧರಿಸಿ 
ತುಟಿಗೆ ಬಣ್ಣ ಬಳಸಿ 
ಸದ್ದಿಲ್ಲದೇ ಹೆಜ್ಜೆ ಹಾಕುತ 
ಮನದ ದಾರಿಯಲಿ ಸಾಗುತ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ಬೆಳದಿಂಗಳ ಬಾಲೆ 
ಮುಡಿದಳು ಮಲ್ಲಿಗೆ ಮಾಲೆ 
ಭಾವನೆಗಳ ಕಣ್ಣಿನಲಿ 
ಕಾಣಿದಳು ಹೃದಯದ ಗಲ್ಲಿಯಲಿ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ನಗುವನ್ನು ಚೆಲ್ಲುತ 
ನನ್ನೆದೆಯ ಗೆಲ್ಲುತ 
ಬಯಕೆ ಬಳ್ಳಿ ಬೆಳೆಸಿ 
ಪ್ರೀತಿ ಮೊಗ್ಗು ಕಲ್ಪಿಸಿ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ಹೃದಯ ಕದ್ದಳು 
ಮನಸ್ಸು ಗೆದ್ದಳು
ಭವ್ಯ ಪ್ರೆಮಲೋಕದಲಿ 
ನನ್ನ ಪ್ರೀತಿಯ ದೇಗುಲದಲಿ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ಗುರುವಾರ, ಮಾರ್ಚ್ 24, 2011

ನನ್ನ ಕಂದ


ಮುದ್ದು ಮುದ್ದಾದ ಕಂದ 
ಮೊದಲ ದಿನದ ನೆನಪು ಚೆಂದ 
ಹೊಸ ಜಗಕೆ ನೀ ಬಂದಾಗ 
ನಕ್ಕು ನಕ್ಕು ನಲಿದಾಡಿದೆ 
ಮುದ್ದಾದ ಮುಖ ಕಂಡು 
ಮುತ್ತಿಟ್ಟು ಬೆರಗಾದೆ 
ಕರಳು ಕುಡಿ ನೀನು 
ಮನೆ ದೀಪ ಬೆಳಗಿದೆ 
ನೀ ಬಂದ ಹೊತ್ತಿಗೆ 
ಎಲ್ಲರ ಮನ ಸೇರಿದೆ 
ಮೊದಲ ಹೆಜ್ಜೆ ಇಡುವಾಗ 
ಗೆಜ್ಜೆ ಹಾಕಿ ಕುಣಿದಾಡಿದೆ 
ತೊದಲು ನುಡಿ ಸವಿದು 
ಮುಖವೆಲ್ಲ ಅರಳಿದೆ 
ಮುದ್ದು ಮುದ್ದಾದ ಕಂದ 
ನಿನ್ನ ನೆನಪುಗಳೇ ಬಲು ಅಂದ 

ಬೇಸಿಗೆ



ಬಂತು ಬೇಸಿಗೆ ನೋಡಿ 
ಬಿಸಿ ಬಿಸಿ ಕಾಡು ಬಿಡಿ 
ಬೆವರಿನಲ್ಲಿಯೇ ಸ್ನಾನ 
ಬಿಸಿಲಿನಲ್ಲೂ ಪಯಣ 
ಕರವಸ್ತ್ರದ ಕಪ್ಪು ವರ್ಣ 
ನೀರದಿಕೆಯಾಗುವುದು ಚೆನ್ನ 
ವಿದ್ಯುತ್ ಸಮಸ್ಯೆ ಅಣ್ಣ 
ಸೊಳ್ಳೆಯ ಕೆಂಪು ಬಣ್ಣ 
ಪಾನೀಯ ಕುಡಿಯುವ ಮುನ್ನ 
ಎಚ್ಚರವೆಂದು ಹೇಳುವರಣ್ಣ
ಕಣ್ಣುಗಳಿಗೆ ಕನ್ನದಕವೇ ಅಂದ 
ಖಾದಿ ಬಟ್ಟೆ ಧರಿಸುವುದು ಚೆಂದ 
ಬಿಸಿಲೆಮ್ದು ಮರುಗಬೇಡ 
ಇದು ಬೇಸಿಗೆ ಕಾಲ ಮರೆಯಬೇಡ 

ಹೇಳು ಕಾರಣ ?



ನಾ ಸನಿಹ ಬಂದರೆ 
ದೂರವೇಕೆ ಸಾಗುವೆ 
ಪ್ರೀತಿ ನೀಡುವೆ ನಾನು 
ಬೆದವೆಂದೇಕೆ  ಹೇಳುವೆ 
ಜೀವದ ಗೆಳತಿ ನೀನು 
ಏಕೆ ಮರೆತಿರುವೆ 
ಸಿರಿವಂತ ನಾನು ಹೃದಯದಿಂದ 
ಪ್ರೀತಿಸು ಮನ ಹೇಳಿದೆ 
ಸುಂದರ ನೆನಪಿನ ಅಲೆಗಳು 
ಬಂದು ಅಪ್ಪಳಿಸಿದೆ 
ನಾ ನಿನ್ನ ನೋಡುವಾಗ 
ನೀನೇಕೆ ಮರೆಯಾಗುವೆ 
ನಗು ಮುಖವ ನೋಡಲು 
ನಯನಗಳು ಕಾದಿವೆ 
ಹೇಳದೆ ಕಾರಣ ಪ್ರೀತಿಯಲಿ 
ದೂರಾಗಿ ಉಸಿರು ನಿಂತಿದೆ 
ಬಾ ಬೇಗ ಸಂಗಾತಿ 
ಈ ಜೀವ ನಿನಗಾಗಿ ಹುಟ್ಟಿದೆ 

ಸೋಮವಾರ, ಮಾರ್ಚ್ 21, 2011

ಕವಿತೆ..

ಯಾರೋ ಬಡವರು ಬೆವರು ಸುರಿಸಿ 
ಮೈಯ್ಯ ದಣಿಸಿ ಕಲ್ಮಣ್ಣು ಹೇರಿ 
ಹಾಡು ಹಾಡುತ 
ಸುಖ ದು:ಖ ಹಂಚುತ 
ಒಡತಿಯ ನೆನಪಿಸಿ 
ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ 

ಕಲಾವಿದರು ಭಾವಗಳ ಬಣ್ಣ ಬಳಿದು 
ಹೊಸತು ರೂಪ ತಂದು 
ಕಣ್ಣಿಗೆ ಕ್ಷೇಮವಾಗಿ ಮನಸಿಗೆ ಮೌಲ್ಯವಾಗಿ 
ಮೆಚ್ಚುಗೆಯ ಬಣ್ಣವಾಗಿ 
ಗೋಡೆಗೆ ಅಂದವಾಗಿ 
ಅರಮನೆಯ ಸುಂದರತೆ ಹೆಚ್ಚಿಸಿದ 

ಆಳಿದವ ರಾಜ ಅವನ ಪ್ರೀತಿಯ ರಾಣಿ 
ಮುದ್ದಾದ ಮಗುವಿಗೆ 
ಹೊಸ ಜನುಮ ನೀಡಿದ 
ಸುಖಸಾಗರ ಅವರದು ಪ್ರೀತಿಯ ಹೊಳೆ ಹರಿವುದು 
ನರ್ತಕಿ ಕುಣಿದರೆ ಅಂಗಳವು ಸ್ವರ್ಗ 
ಪ್ರಜೆಗಳ ಸೌಖ್ಯವೆ ಮಂಗಳ ಕಾರ್ಯ 
ರಾಜ ರಾಣಿಗೆ ಪ್ರೀತಿಯೇ ಜೀವನ 

ಕವಿಯೊಬ್ಬ ಹೇಳಿದ ರಾಜ ರಾಣಿಯ ಕಥೆಯ 
ಜನ ಮೆಚ್ಚಿದರು ಅವರ ನೆನಪಿನ ಪುಟವ 
ವರ್ಣಿಸಿದ ಬಣ್ಣದ ಅರಗಿಣಿಯ 
ಕನಸಲಿ ಕಂಡ ಸುಂದರ ಅರಮನೆಯ 
ರತಿಯಾಗಿ ಬಂದ ರಾಜಕುಮಾರಿಯ 
ಸ್ನೇಹಿಸಿದ ಪ್ರೀತಿಸಿದ 
ಅವಳ ರೂಪಕೆ ಸೋತು ಹೃದಯ  ನೀಡಿದ 
ಕಾಣಿಕೆಗೆ ನೆನಪಿನ ಪ್ರೀತಿಯ ಕವಿತೆ 
ಪುಟದಲಿ ಬರೆದು ಮುದ್ದಾಡಿದ 


ಶನಿವಾರ, ಮಾರ್ಚ್ 19, 2011

ಬಣ್ಣ ಬಣ್ಣದ ಹುಡುಗಿ



ಮನಮೋಹಿತೆ ಚೆಲುವ 


ಚಂದ್ರನ ಅರಗಿಣಿಯೇ

ನಯನಗಳು ಕಂಡ 

ನಿನ್ನ ರೂಪವ ವರ್ಣಿಸಲೇ 

ನಗುವೆಂದು ಹೇಳುತ 

ನಕ್ಕಿದ ಆ ತುಟಿ ಕೆಂಪಾದವೇ

ನಾಚಿಕೆ ಭಾವ ಮೂಡಿ 

ಕೆನ್ನೆ ಅರಳಿದ ಗುಲಾಬಿ ಕಂಡಿತೇ

ಹೊಳೆಯುವ ಭಾವಗಳ ಆಗಸದ

ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ

ಮೆಲ್ಲನೆಯ ಮನಸ್ಸು ಕದ್ದ

ಹಲ್ಲುಗಳು ಮುತ್ತಾಗಿ ಮಾತಾಡಿತ್ತು 

ಸರಳ ರೇಖೆಯ ರಂಗೋಲಿ 
ಮೂಗಿನ ಬಂಗಾರದ ಮೂಗುತಿಯು ಹೊಳೆಯಿತೇ
ನಿನ್ನ ಕೈ ಸ್ಪರ್ಶದಲ್ಲಿ 
ಹಸಿರು ಬಳೆಗಳು ರಾಗ ಹಾಡಿತೇ
ಮೆದುವಾದ ರೇಷ್ಮೆಯ ಎಳೆಗಳ 
ಕಪ್ಪು ಕೂದಲು ಮಲ್ಲಿಗೆ ಮುಡಿಯಿತೇ
ಮೈ ತುಂಬ ಉಟ್ಟ ಬಣ್ಣ 
ಚಿಟ್ಟೆಯ ಸೀರೆ ಸೊಂಟದ ಬದಿಗೆ ಸರಿಯಿತೇ
ದಿನದಲ್ಲೂ ಚಂದ್ರ ಭೂಮಿಗೆ 
ಬಂದನೆಂದು ರೂಪಸಿಯ ನೋಡಿ ಮನ ಬೆರಗಾಯಿತೇ ...


ಬುಧವಾರ, ಮಾರ್ಚ್ 16, 2011

ಬೆಳಗಾಂವ ದೇವರು

ಈ ಕವಿತೆಯನ್ನು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಇಟಗಿ ಈರನ್ನನವರು  ಹೇಳಿದ್ದು 
ಬಹು ಸುಂದರ ಕವಿತೆ ರಚಿಸಿ ಎಲ್ಲರ ಮನ ಸೆಳೆದರು .. ಬೆಳಗಾವಿಯಲ್ಲಿ ಎಲ್ಲರ ಮನ ಸೆಳೆದ 
ಈ ಕವಿತೆಯನ್ನು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಇಷ್ಟಪಟ್ಟಿರುವೆ .... 


ನಮ್ಮದು ಬೆಳಗಾಂವ 
ನಿಮ್ಮದು ಬೆಳಗಾಂವ 
ಎಲ್ಲರದೂ ಬೆಳಗಾಂವ 
ಹಗಲೂ ಬೆಳಗಾಂವ
ರಾತ್ರಿ ಬೆಳಗಾಂವ 
ಹಗಲೂ ಬೆಳಗಾಂವ ಸೂರ್ಯ 
ರಾತ್ರಿ ಬೆಳಗಾಂವ ಚಂದ್ರ 
ಬೆಳಗು ಸೂರ್ಯನ್ನು 
ಬೆಳಗು ಚಂದ್ರನ್ನು
ಬೆಳಗಾಂವ ಯಾರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 

ನಮ್ಮ ಒಳಗೆ ಬೆಳಗಾಂವ 
ನಮ್ಮ ಹೊರಗೂ ಬೆಳಗಾಂವ 
ನಮ್ಮ ನಿಮ್ಮ ಒಳ ಹೊರಗೂ ಬೆಳಗಾಂವ 
ನಮ್ಮ ನಿಮ್ಮ ಈ ಬಾಳ ಬೆಳಗಾಂವ
ನಮ್ಮ ನಿಮ್ಮ ಈ ಲೋಕ ಬೆಳಗಾಂವ 
ಬೆಳಗು ಗುಣ ಇರಾಂವ
ಬೆಳಗಾಂವ ನಮ್ಮ ದೇವರು 
ನಾವು ಕೊಡುವವರಲ್ಲಿ
ನಾವು ಬಿಡುವವರಲ್ಲಿ
ನಮ್ಮ ಬೆಳಗಾಂವ 
ನಿಮ್ಮ ಬೆಳಗಾಂವ 
ನಮ್ಮೆಲ್ಲರಿಗೂ ಬೆಳಗಾಂವ 
ನಮ್ಮೆಲ್ಲರಿಗಂತೂ ನಮ್ಮ ಬೆಳಗಾಂವ ದೇವರು 
ಇಂದು ನಾಳೆ ಮುಂದು ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 

ನಮ್ಮ ತ್ರಿಕಾಲ ಪ್ರೀತಿಯ ಸಂಕೇತ 
ವಿಶ್ವ ಕನ್ನಡ ಸಾಹಿತ್ಯದ ಜಾತ್ರೆ 
ಸಂತಸದ ಜಾತ್ರೆ ಈ ತೇರು 
ಬೆಳಗಾಂವ ಯಾವತ್ತು ದೇವರು 
ಅದಕ್ಕಿಲ್ಲಿ ವಿಶ್ವದ ತೇರು 
ಬೆಳಗಾಂವ ನಮ್ಮ ದೇವರು 
ವಿಶ್ವಕ್ಕೆಲ್ಲ ನೀ ಈ ಮಾತು ಸಾರು 
ಬೆಳಗಾಂವ ನಮ್ಮ ದೇವರು 
ಕನ್ನಡ ಬೆಳಗಾಂವ ನಮ್ಮ ದೇವರು 
ಇಲ್ಲೇ ನಮ್ಮ ತೇರು 
ಇಲ್ಲೇ ನಮ್ಮ ಜೋರು 
ಏಕೆಂದರೆ ಬೆಳಗಾಂವ ನಮ್ಮ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 


ಸೋಮವಾರ, ಮಾರ್ಚ್ 7, 2011

ಸ್ವಾಗತ

ಪ್ರೀತಿ ತುಂಬಿದ 
"ಭಾರತ" ದಲ್ಲಿ 
ಕನಸು ತುಂಬಿದ 
"ಕರ್ನಾಟಕ"ದಲ್ಲಿ 
ಭಾವನೆ ತುಂಬಿದ 
"ಬೆಳಗಾವಿ"ಯಲ್ಲಿ 
ಮಾರ್ಚ್ ೧೧,೧೨,೧೩ ರಂದು 
"ವಿಶ್ವ ಕನ್ನಡ ಸಮ್ಮೇಳನ "
ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ 
ಒಂದುಗೂಡುವ  ನಮ್ಮ ಈ ಕನ್ನಡ ಹಬ್ಬಕೆ 
ಆಗಮಿಸಿ ಯಶಸ್ವಿಯಾಗಲು ಸಹಕರಿಸಿ 
ಜೈ ಕರ್ನಾಟಕ 
ಜೈ ಬೆಳಗಾವಿ 


ಶುಕ್ರವಾರ, ಮಾರ್ಚ್ 4, 2011

ಏಕೆ


ಗೋಡೆ ಬದಿಗೆ ಅಡುಗಿ
ಏಕೆ ನಿಂತಿಹೆ
ಕಾಡಿ ಬೇಡಿ ಪ್ರೀತಿ
ಏಕೆ ಮಾಡಿದೆ
ಮೋಸ ಬೇಡ ಪ್ರೀತಿಯಲ್ಲಿ
ಏಕೆ ನಂಬಿದೆ 
ಹೃದಯ ಕದ್ದ ನಲ್ಲನೆ 
ಏಕೆ ಮಂಕಾದೆ 
ಭಾವನೆಯ ಬೀಜವ 
ಏಕೆ ಹುಟ್ಟಿಸಿದೆ 
ಬೇಡೆಂದರೂ ಬಳಿಗೆ 
ಏಕೆ ಬಂದಿಹೆ 
ಮರೆತಿರುವೆ ನನ್ನನು
ಏಕೆ ಪ್ರೀತಿಸಿದೆ 
ಹೇಳು ನೀನು ಕಾರಣ
ಏಕೆ ಪ್ರೀತಿಸಿದೆ 
ಎದೆಗೆ ಚೂರಿ ಎರಗಿ
ಏಕೆ ಪ್ರೀತಿಸಿದೆ

ಕಣ್ತೆರೆದು ನೋಡು

ಹೊಸ ಕನಸು ಹೊತ್ತು
ಸೂರ್ಯ ಬಂದ ನೋಡು
ನವನವೀನ ಖುಷಿಯ
ಸವಿಯಲು ಸಿಧ್ಧನಾದ ನೋಡು
ದು:ಖವೆಲ್ಲ ಮರೆಸಿ
ಮನಸು ಹಗುರಾಯಿತು ನೋಡು
ನೀಲ ಆಗಸ ತಲುಪುವ
ಬಯಕೆ ಹುಟ್ಟಿದೆ ನೋಡು
ಖುಷಿಯಾದ ಮನಸೊಂದು
ಬಳಿ ಬಂದಿದೆ ನೋಡು
ಸ್ನೇಹದ ಬಂಧಕೆ ಹೆಜ್ಜೆ
ಇಟ್ಟು ನೋಡು
ಪ್ರೀತಿ ದುಂಬಿಯು
ಮಕರಂದ ಹೀರುವುದು ನೋಡು
ಜೀವನದಲಿ ಸುಖಸಾಗರ
ಹರಿಯುವುದು ನೋಡು

ಬಯಕೆ


ಬಯಕೆಯ ಬೀಜವೊಂದು 
ಬೇರು ಬಿಟ್ಟಿದೆ 
ಗಟ್ಟಿಯಾಗಿ ಎದೆಗೆ 
ಅಂಟಿಕೊಂಡಿದೆ 
ಕಿತ್ತೆಸೆಯಲು ಬಾರದ 
ಪ್ರೀತಿಯ ಬಯಕೆಯಾಗಿದೆ 
ಹೂವಾಗಿ ಹಣ್ಣು ಕೊಡುವ 
ಕನಸು ಕಾಣಿದೆ 
ಬಳ್ಳಿ ಚಿಗುರಿದರು ಮೊಗ್ಗು 
ಕಾಣೆಯಾಗಿದೆ 
ಹಲವು ದಿನ ಕಳೆದು ಬಯಕೆಯ 
ಬಳ್ಳಿ ಗಿಡವಾಗಿ ಬೆಳೆದಿದೆ 
ಮೊಗ್ಗು ಬಾರದ ಕಾರಣಕೆ 
ಮನಸ್ಸನ್ನು ಕೊಲ್ಲುತಿದೆ 
ಚಿಗುರುವ ಎಲೆಯನ್ನು 
ದು:ಖದಲಿ ಕಿತ್ತೆಸೆಯುತಿದೆ 
ಕತ್ತಲಲಿ ಕುರುಡನೊಬ್ಬ 
ಕನಸು ಕಂಡಂತಾಗಿದೆ 
ಹೊಸ ಬಯಕೆಯ ಬಳ್ಳಿಗೆ 
ಮೌನದ ಮಾತು ಹೇಳಿದೆ 
ಮೊಗ್ಗು ಕಾಣದ ಈ ಗಿಡವ
ಸುಡುವೆಯಾ? ದು:ಖದಲಿ ಕೇಳಿದೆ 
ಸಿಗಲಾಗದ ಬಯಕೆ ಕೊಂದು 
ಭಸ್ಮ ಮಾಡು ಎಂದಿದೆ
ಕಣ್ಣೀರಿನ ಹಾಗೆ 
ಎಲೆ ಉದುರಿಸಿದೆ
ನನಸಾಗುವ ಕೊರಗಲ್ಲಿ 
ಗಿಡವು ಒಣಗಿ ಮುರಿದಿದೆ